ಆರ್​ಟಿಒ ಕಚೇರಿಯ 16 ಲಕ್ಷ ಹಣದೊಂದಿಗೆ ಎಸ್​​​ಡಿಎ ಸಿಬ್ಬಂದಿ ನಾಪತ್ತೆ


ಬಳ್ಳಾರಿ: ಬಳ್ಳಾರಿಯ ಆರ್‌ಟಿಒ ಕಚೇರಿಯಲ್ಲಿ ಟ್ರೇಜರಿ ಸೆಕ್ಷನ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ದ್ವಿತೀಯ ದರ್ಜೆಯ ಸಹಾಯಕ (ಎಸ್‌ಡಿಎ) ರವಿ ತಾವರಖೇಡ 16 ಲಕ್ಷ ರೂ.ಗಳ ಹಣದೊಂದಿಗೆ ನಾಪತ್ತೆಯಾಗಿರುವ ಆರೋಪ ಕೇಳಿಬಂದಿದೆ.

ಆರ್‌ಟಿಒ ಕಚೇರಿಯ ಅಧೀಕ್ಷಕ ವೀರೇಶ್ ಅವರು ನೀಡಿದ ದೂರಿನ ಮೇರೆಗೆ ಕೌಲ್‌ಬಜಾರ್ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 316(2), 318 (4) ಪ್ರಕಾರ ಕೇಸ್ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.ಆರ್‌ಟಿಒ ಕಚೇರಿಯಲ್ಲಿ ಸಾರ್ವಜನಿಕರ ವಿವಿಧ ಸೇವೆಗಳಿಂದ ಸಂಗ್ರಹಿಸಲಾದ ಹಣವನ್ನು ಆಯಾ ದಿನವೇ ಬ್ಯಾಂಕ್‌ಗೆ ಜಮಾ ಮಾಡುವುದು ರೂಢಿ. ರವಿಯವರು ಕೂಡಾ ಈ ಹಿಂದೆ ಆಯಾ ದಿನ ಸಂಗ್ರಹವಾದ ಹಣವನ್ನು ಬ್ಯಾಂಕ್​ಗೆ ಪಾವತಿಸುತ್ತಾ ಬಂದಿದ್ದಾರೆ. ಆದರೆ, ಕಳೆದ ಮೇ ತಿಂಗಳ 26 ರಿಂದ 31ರವರೆಗೆ ಕಚೇರಿಯಲ್ಲಿ ಸಂಗ್ರಹವಾದ 16,72,518 ರೂ.ಗಳ ಹಣವನ್ನು ಬ್ಯಾಂಕ್‌ಗೆ ಪಾವತಿಸಿಲ್ಲ ಎಂದು ತಿಳಿದು ಬಂದಿದೆ.

16,72,518 ರೂ.ಗಳ ಹಣದೊಂದಿಗೆ ರವಿ ತಾವರ ಖೇಡ ಅವರು ನಾಪತ್ತೆಯಾಗಿರುವ ಬಗ್ಗೆ ನಿನ್ನೆ ಸಂಜೆ ನಗರದ ಕೌಲ್‌ಬಜಾರ್ ಪೊಲೀಸ್ ಠಾಣೆಗೆ, ಪ್ರಾದೇಶಿಕ ಸಾರಿಗೆ ಕಚೇರಿಯ ಸೂಪರಿಂಟೆಂಡೆಂಟ್ (ಅಧೀಕ್ಷಕ) ವೀರೇಶ್ ಅವರು ದೂರು ದಾಖಲಿಸಿದ್ದಾರೆ.

ಬಳ್ಳಾರಿಯ ‘ಆರ್‌ಟಿಒ’ ಕಚೇರಿಯು ಇತ್ತೀಚಿನ ದಿನಗಳಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ಸುದ್ದಿಯಾಗುತ್ತಿದೆ. ಕಚೇರಿಯ ಎಸ್‌ಡಿಎ ಒಬ್ಬರು ಸಾರ್ವಜನಿಕರು ನೀಡಿದ ಶುಲ್ಕದ ಹಣವನ್ನು ಬ್ಯಾಂಕ್​ಗೆ ತುಂಬಿಲ್ಲ.

ಹಣವನ್ನು ರವಿ ಬ್ಯಾಂಕ್​​ಗೆ ಏಕೆ ಪಾವತಿಸಿಲ್ಲ, ಹಣ ಎಲ್ಲಿಗೆ ಹೋಯಿತು? ರವಿಯವರು ಕಳೆದ ಕೆಲ ದಿನಗಳಿಂದ ನಾಪತ್ತೆಯಾಗಿರುವುದೇಕೆ? ಎನ್ನುವ ಪ್ರಶ್ನೆಗಳು ಸಹಜವಾಗಿಯೇ ಮೂಡಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ರವಿಯವರ ಮೊಬೈಲ್ ಫೋನ್ ಕೂಡ ಸ್ವಿಚ್ಡ್​ ಆಫ್ ಆಗಿದೆ.

ಟ್ರೇಜರಿಯಲ್ಲಿ ಜಮಾ ಆದ ಹಣವನ್ನು ಬ್ಯಾಂಕ್​ಗೆ ಕಟ್ಟದೆ ಇರುವುದು ಮೇ 4 ರಂದು ಗೊತ್ತಾಯಿತು. ಸಂಡೂರಿನ ಭೀಕರ ಅಪಘಾತದ ಹಿನ್ನೆಲೆಯಲ್ಲಿ ನಾನು ಅಲ್ಲೇ ಬೀಡು ಬಿಟ್ಟಿದ್ದೆ. ಆದ್ದರಿಂದ ಆ ವೇಳೆ ಟ್ರೇಜರಿ ಬಗ್ಗೆ ನಾನು ಗಮನ ಹರಿಸಿರಲಿಲ್ಲ. ಮೇ 4 ರಂದು ಗೊತ್ತಾದ ತಕ್ಷಣದ ಅವರ ಮನೆಗೆ ನಮ್ಮ ಸಿಬ್ಬಂದಿಯನ್ನು ಕಳುಹಿಸಿದೆವು. ಬಳಿಕ ಅವರ ಫೋನ್ ಮೂಲಕ ಸಂಪರ್ಕಿಸಿದಾಗ ಬೆಳಗ್ಗೆ ಬಂದು ಕೊಡುವುದಾಗಿ ತಿಳಿಸಿದ್ದರು. ಆ ನಂತರ ಈವರೆಗೆ ಬಂದಿಲ್ಲ. ಆದ್ದರಿಂದ ಎಫ್​ಐಆರ್ ದಾಖಲಿಸಿದ್ದೇವೆ. ರವಿ ಅವರು ವಿಜಯಪುರ ಮೂಲದವರಾಗಿದ್ದು, ಹುಬ್ಬಳ್ಳಿಯಿಂದ ವರ್ಗಾವಣೆ ಆಗಿ ಬಂದಿದ್ದರು ಎಂದು ಆರ್​ಟಿಒ ಅಧಿಕಾರಿ ತಿಳಿಸಿದ್ದಾರೆ.


Leave a Comment

Your email address will not be published. Required fields are marked *