ಡೆತ್​ನೋಟ್​ ಬರೆದಿಟ್ಟು ಯುವಕ ಆತ್ಮಹತ್ಯೆ


ಚಿಕ್ಕೋಡಿ: ಯುವಕನೊಬ್ಬ ಡೆತ್​ನೋಟ್​ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಅಥಣಿ ತಾಲೂಕಿನ ಕಕಮರಿ ಗ್ರಾಮದಲ್ಲಿ ಸೋಮವಾರ ನಡೆದಿದೆ. ಗುರುರಾಜ (28) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಡೆತ್​ನೋಟ್​ನಲ್ಲಿ ಮೂವರ ಹೆಸರನ್ನು ಬರೆದಿಟ್ಟು ಯಾರೂ ಇಲ್ಲದ ವೇಳೆ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಸುದ್ದಿ ತಿಳಿದು ಸ್ಥಳಕ್ಕೆ ಬಂದ ಐಗಳಿ ಠಾಣಾ ಪೊಲೀಸರು ಪರಿಶೀಲನೆ ನಡೆಸಿದರು.

ಈ ಕುರಿತು ಬೆಳಗಾವಿ ಎಸ್ಪಿ ಭೀಮಶಂಕರ್ ಗುಳೇದ ಮಾಹಿತಿ ನೀಡಿ, “ಡೆತ್​ನೋಟ್​ ಬರೆದಿಟ್ಟು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಮಾಹಿತಿ ಗೊತ್ತಾಗುತ್ತಿದ್ದಂತೆ ನಮ್ಮ ಸಿಬ್ಬಂದಿ ಸ್ಥಳಕ್ಕೆ ಹೋಗಿ ಪರಿಶೀಲಿಸಿದ್ದಾರೆ. ಈ ಯುವಕ ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಡೆತ್​ನೋಟ್​ನಲ್ಲಿ ಮೂರು ಜನರ ಹೆಸರು ಬರೆದು ಆತ್ಮಹತ್ಯೆ ಮಾಡಿಕೊಂಡಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ” ಎಂದು ಹೇಳಿದರು.

“ಮೃತ ಯುವಕ ಸಾಲ ಮಾಡಿಕೊಂಡಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ, ಯಾವ ಕಾರಣಕ್ಕೆ ಸಾಲ ಮಾಡಿಕೊಂಡಿದ್ದ ಎಂಬುದು ಮುಖ್ಯ. ಈತ ಜೂಜಾಟದಲ್ಲಿ ತೊಡಗಿದ್ದ ಎಂಬ ಮಾಹಿತಿ ಕೂಡ ದೊರೆತಿದೆ. ಹಾಗಾಗಿ ಯುವಕನ ಈ ಆತ್ಮಹತ್ಯೆ ಪ್ರಕರಣವನ್ನು ಹಲವು ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ” ಎಂದು ತಿಳಿಸಿದರು.

“ಯಾರೋ ಕೆಲಸ ಕೊಡಿಸುವುದಾಗಿ ಹೇಳಿದ್ದವರು, ಕೊಡಿಸಲಿಲ್ಲ ಎಂಬ ಕಾರಣಕ್ಕೆ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ, ಈ ಪ್ರಕರಣದಲ್ಲಿ ನಮಗೆ ಬೇರೆ ಬೇರೆ ರೀತಿಯ ಮಾಹಿತಿ ಕೇಳಿ ಬರುತ್ತಿವೆ. ಸಾಲ ಮಾಡಿಕೊಂಡಿದ್ದು ನಿಜ. ಅದರ ಬಗ್ಗೆ ಎರಡು ಮಾತಿಲ್ಲ. ಆದರೆ, ಸಾಲ ಯಾವ ಕಾರಣಕ್ಕೆ ಮಾಡಿದ್ದ ಅನ್ನೋದು ಬಹಳ ಮುಖ್ಯ. ಈತ ಸಾಮಾಜಿಕ ಪೀಡುಗುಗಳಿಗೆ ಬಲಿಯಾಗಿದ್ದ. ಈ ವಿಚಾರದಲ್ಲಿ ಪೊಲೀಸರು ತನಿಖೆ ನಡೆಸಲಿದ್ದಾರೆ” ಎಂದರು.


Leave a Comment

Your email address will not be published. Required fields are marked *