ಬೆಂಗಳೂರು: ಜಿಗಣಿಯಲ್ಲಿ ಪಾಕಿಸ್ತಾನ ಪ್ರಜೆಗಳ ಬಂಧನ ಬೆನ್ನಲ್ಲೇ 14 ಪಾಕಿಸ್ತಾನೀಯರು ಅರೆಸ್ಟ್


ಇತ್ತೀಚೆಗೆ ಬೆಂಗಳೂರಿನ ಜಿಗಣಿಯಲ್ಲಿ ಪಾಕಿಸ್ತಾನ ಪ್ರಜೆಗಳನ್ನು ಬಂಧಿಸಿರುವುದು ಇದೀಗ ಬಲು ದೊಡ್ಡ ಆಘಾತಕಾರಿ ಮಾಹಿತಿಯನ್ನು ಬಹಿರಂಗಪಡಿಸಿದೆ. ಬಂದಿತರ ವಿಚಾರಣೆಯ ವೇಳೆ ದೊರೆತ ಮಾಹಿತಿಯ ಆಧಾರದಲ್ಲಿ ಕಾರ್ಯಾಚರಣೆ ನಡೆಸಿದ ಜಿಗಣಿ ಪೊಲೀಸರಿಗೆ, ದೇಶಾದ್ಯಂತ ಪಾಕಿಸ್ತಾನ ಪ್ರಜೆಗಳ ಸಕ್ರಿಯ ಜಾಲವೊಂದು ಕಾರ್ಯಾಚರಿಸುತ್ತಿರುವುದು ತಿಳಿದುಬಂದಿದೆ. 14 ಮಂದಿ ಪಾಕಿಸ್ತಾನ ಪ್ರಜೆಗಳನ್ನು ಇದೀಗ ಬಂಧಿಲಾಗಿದ್ದು ಆ ಕುರಿತ ವಿವರ ಇಲ್ಲಿದೆ.

ಬೆಂಗಳೂರು: ಜಿಗಣಿಯಲ್ಲಿ ಪಾಕಿಸ್ತಾನ ಪ್ರಜೆಗಳ ಬಂಧನ ಬೆನ್ನಲ್ಲೇ 14 ಪಾಕಿಸ್ತಾನೀಯರು ಅರೆಸ್ಟ್

ಬಂಧಿತ ಪಾಕ್ ಪ್ರಜೆಗಳಾದ ಪರ್ವೇಜ್ (ಮಾಸ್ಟರ್​ಮೈಂಡ್) ಮತ್ತು ರಶೀದ್ ಅಲಿ ಸಿದ್ದಿಕಿ

ಆನೇಕಲ್, ಅಕ್ಟೋಬರ್ 9: ಜಿಗಣಿಯಲ್ಲಿ ಪಾಕಿಸ್ತಾನದ ಪ್ರಜೆಗಳ ಬಂಧನ ಪ್ರಕರಣ ಇದೀಗ ಮಹತ್ವದ ತಿರುವು ಪಡೆದುಕೊಂಡಿದೆ. ಬಂಧಿತರ ವಿಚಾರಣೆ ವೇಳೆ ತಿಳಿದುಬಂದ ಸ್ಫೋಟಕ ಮಾಹಿತಿಯ ಆಧಾರದಲ್ಲಿ ಕಾರ್ಯಾಚರಣೆ ನಡೆಸಿದ ಜಿಗಣಿ ಪೊಲೀಸರು ಇದೀಗ ದೇಶದಾದ್ಯಂತ ಸಕ್ರಿಯರಾಗಿದ್ದ 14 ಮಂದಿ ಪಾಕಿಸ್ತಾನೀಯರನ್ನು ಬಂಧಿಸಿದ್ದಾರೆ. ಇದರೊಂದಿಗೆ ಭಾರತದಲ್ಲಿ ಕಾರ್ಯಾಚರಿಸುತ್ತಿರುವ ಪಾಕ್​ ಪ್ರಜೆಗಳ ಜಾಲ ಇನ್ನಷ್ಟು ವಿಸ್ತರಿಸಿರುವ ಆತಂಕ ಎದುರಾಗಿದೆ. ಬಂಧಿತರ ವಿಚಾರಣೆಯಿಂದ ಒಂದೊಂದಾಗಿ ಮಾಹಿತಿ ತಿಳಿದುಬರುವ ನಿರೀಕ್ಷೆ ಇದೆ.

ಬಂಧಿತ ಪಾಕ್ ಪ್ರಜೆಗಳ ಸಂಖ್ಯೆ 22ಕ್ಕೆ ಏರಿಕೆ

14 ಮಂದಿಯ ಬಂಧನದೊಂದಿಗೆ ದೇಶದಲ್ಲಿ ಜಿಗಣಿ ಹಾಗೂ ಕರ್ನಾಟಕ ಪೊಲೀಸರು ಬಂಧಿಸಿದ ಪಾಕಿಸ್ತಾನಿ ಪ್ರಜೆಗಳ ಸಂಖ್ಯೆ 22ಕ್ಕೆ ಏರಿಕೆಯಾಗಿದೆ. ಇವರೆಲ್ಲ ದೇಶದ ನಾನಾ ಭಾಗಗಳಲ್ಲಿ ಅಡಗಿ ಕುಳಿತಿದ್ದರು. ಪ್ರಕರಣದ ಕಿಂಗ್​ಪಿನ್ ಪರ್ವೇಜ್ ಬಂಧನದ ಬೆನ್ನಲ್ಲೇ ಇನ್ನಿತರರು ಪೊಲೀಸ್ ಬಲೆಗೆ ಬಿದ್ದಿದ್ದಾರೆ.

ಹಲವು ರಾಜ್ಯಗಳಲ್ಲಿ ಕಾರ್ಯಾಚರಣೆ ನಡೆಸಿದ್ದ ಪೊಲೀಸರು

ಜಿಗಣಿಯಲ್ಲಿ ಪಾಕಿಸ್ತಾನ ಪ್ರಜೆಗಳು ಅರೆಸ್ಟ್ ಆದ ಬೆನ್ನಲ್ಲೇ ಹೆಚ್ಚಿನ ತನಿಖೆಗಾಗಿ ಪೊಲೀಸರ 4 ತಂಡಗಳ ರಚನೆ ಮಾಡಿ ವಿವಿಧ ರಾಜ್ಯಗಳಿಗೆ ಕಳುಹಿಸಿಕೊಡಲಾಗಿತ್ತು. ಚೆನ್ನೈ, ದೆಹಲಿ, ಹೈದರಾಬಾದ್​ಗೆ ತೆರಳಿದ್ದ ಪೊಲೀಸರ ತಂಡ ಮೆಹದಿ ಫೌಂಡೇಷನ್ ಸಂಪರ್ಕದಲ್ಲಿದ್ದ ಒಟ್ಟು 22 ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಬಂಧಿತ ಪಾಕ್ ಪ್ರಜೆಗಳೆಲ್ಲ ಧರ್ಮ ಪ್ರಚಾರಕ್ಕಾಗಿ ಭಾರತಕ್ಕೆ ನುಸುಳಿದ್ದಲ್ಲದೆ, ವಿವಿಧ ರಾಜ್ಯಗಳಲ್ಲಿ ಬೀಡುಬಿಟ್ಟಿದ್ದರು.

ಬೆಂಗಳೂರು ಪೊಲೀಸರಿಂದ ಮುಂದುವರಿದ ತನಿಖೆ

ಬೆಂಗಳೂರಿನ ಪೀಣ್ಯದಲ್ಲಿ ವಾಸವಿದ್ದ ಪಾಕಿಸ್ತಾನ ಪ್ರಜೆಗಳ ಬಂಧನ ಪ್ರಕರಣ ಸಂಬಂಧ ಬೆಂಗಳೂರು ಪೊಲೀಸರಿಂದಲೂ ಹೆಚ್ಚಿನ ತನಿಖೆ ನಡೆಯುತ್ತಿದೆ. ಪೊಲೀಸರು ಬಂಧಿತ ದಂಪತಿಯ ಸಂಪೂರ್ಣ ಮಾಹಿತಿ ಕಲೆ ಹಾಕುತ್ತಿದ್ದಾರೆ. ಈ ದಂಪತಿ ಕಳೆದ ಮೂರು ವರ್ಷಗಳಿಂದ ಪೀಣ್ಯದ ಆಂಧ್ರಹಳ್ಳಿ ಮುಖ್ಯರಸ್ತೆಯ ಮನೆಯಲ್ಲಿ ನಿಗೂಢವಾಗಿ ನೆಲೆಸಿದ್ದರು ಎಂಬುದು ಗೊತ್ತಾಗಿದೆ. ಮನೆಯಿಂದ ಹೊರ ಬಾರದೆ ಒಳಗಡೆಯೇ ನೆಲೆಸಿದ್ದರು ಎನ್ನಲಾಗಿದೆ. ಪಾಕ್​ ಮೂಲದ ಸೈಯದ್, ಆತನ ಪತ್ನಿ ಹಾಗೂ ಮಗಳು ಹೆಸರು ಬದಲಿಸಿಕೊಂಡು ಬೆಂಗಳೂರಿನಲ್ಲಿ ನೆಲೆಸಿದ್ದರು. ಹೊರ ಜಗತ್ತಿನ ಸಂಪರ್ಕ ಇಲ್ಲದೆ ಗೌಪ್ಯವಾಗಿ ನೆಲೆಸಿದ್ದ ಮಾಹಿತಿ ಪೊಲೀಸರ ತನಿಖೆ ವೇಳೆ ಗೊತ್ತಾಗಿದೆ.

ಯೂಟ್ಯೂಬ್​ನಲ್ಲಿ ಧರ್ಮ ಪ್ರಚಾರ

2019ರಲ್ಲಿ ಬೆಂಗಳೂರಿಗೆ ಬಂದಿದ್ದ ಸೈಯದ್ ಮತ್ತು ಕುಟುಂಬ ಅಂದಿನಿಂದ ಧರ್ಮ ಪ್ರಚೋದಕರಾಗಿ ಕೆಲಸ ಮಾಡುತ್ತಿದ್ದರು. ಯೂಟ್ಯೂಬ್​ನಲ್ಲಿ ಪ್ರಚಾರ ಕಾರ್ಯ ಮಾಡುತ್ತಾ ಇದ್ದರು. ಇವರು ಭಾರತಕ್ಕೆ 2014ರಲ್ಲೇ ಬಂದಿದ್ದರು. ನಕಲಿ ಹೆಸರಲ್ಲಿ ಆಧಾರ್ ಮಾಡಿಸಿಕೊಂಡಿದ್ದರು ಎಂಬುದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.

ಇದನ್ನೂ ಓದಿ: ಬೆಂಗಳೂರು: ಮತ್ತೆ ಮೂವರು ಪಾಕಿಸ್ತಾನ ಪ್ರಜೆಗಳ ಬಂಧನ, ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬಯಲು

ಈ ಮಧ್ಯೆ, ಪಾಕಿಸ್ತಾನಿ ಪ್ರಜೆಗಳ ಬಂಧನ ವಿಚಾರ ರಾಜಕೀಯ ಆರೋಪಕ್ಕೂ ಕಾರಣವಾಗಿತ್ತು. ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದ ಗೃಹ ಸಚಿವ ಪರಮೇಶ್ವರ್, ಪಾಕಿಸ್ತಾನ ಪ್ರಜೆಗಳ ಕುಟುಂಬ ಬೆಂಗಳೂರಿನಲ್ಲಿ ವಾಸವಾಗಿರುವ ವಿಷಯ ತಿಳಿದ ಕೂಡಲೇ ನಮ್ಮ ಪೊಲೀಸರು ಅವರನ್ನು ಬಂಧಿಸಿದ್ದಾರೆ. ನಮ್ಮ ಪೊಲೀಸರು ಸಮರ್ಥರಿದ್ದಾರೆ, ಉಳಿದವರನ್ನು ಪತ್ತೆ ಹಚ್ಚುತ್ತೇವೆ. ಕೇಂದ್ರದ ಗುಪ್ತಚರ ಇಲಾಖೆ ವಿಫಲವಾಗಿದೆ ಎಂದಿದ್ದರು.


Leave a Comment

Your email address will not be published. Required fields are marked *