ಡಿಜಿಟಲ್ ಬೋರ್ಡ್‌ನಲ್ಲಿ ಕನ್ನಡಿಗರ ಕುರಿತು ಅವಾಚ್ಯ ಬರಹ: ಹೋಟೆಲ್ ಮ್ಯಾನೇಜರ್, ಸಿಬ್ಬಂದಿ ಪೊಲೀಸ್ ವಶಕ್ಕೆ


ಬೆಂಗಳೂರು: ಕನ್ನಡಿಗರಿಗೆ ಅಪಮಾನವಾಗುವಂತೆ ಹೋಟೆಲ್​​ನ ಡಿಜಿಟಲ್ ಬೋರ್ಡ್‌ನಲ್ಲಿ ಅವಾಚ್ಯ ಬರಹ ಪ್ರದರ್ಶಿಸಿದ ಘಟನೆ ತಡರಾತ್ರಿ ಮಡಿವಾಳ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ತಾವರೆಕೆರೆ ಮುಖ್ಯರಸ್ತೆಯ ಹೋಟೆಲ್​ವೊಂದರಲ್ಲಿ ಅವಾಚ್ಯ ಬರಹ ಡಿಸ್‌ಪ್ಲೇ ಮಾಡಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಕನ್ನಡಿಗರನ್ನ ಕೆಣಕುವಂತೆ ಅವಾಚ್ಯ ಬರಹವನ್ನು ತಡರಾತ್ರಿ ಹೋಟೆಲ್‌ನ ಡಿಜಿಟಲ್ ಬೋರ್ಡ್‌ನಲ್ಲಿ ಡಿಸ್‌ಪ್ಲೇ ಮಾಡಲಾಗಿದೆ. ತಕ್ಷಣ ಎಚ್ಚೆತ್ತ ಮಡಿವಾಳ ಠಾಣೆ ಪೊಲೀಸರು, ಹೋಟೆಲ್‌ಗೆ ತೆರಳಿ ತಪಾಸಣೆ ನಡೆಸಿದ್ದಾರೆ. ಹೋಟೆಲ್ ಮ್ಯಾನೇಜರ್ ನೌಷದ್ ಎಂಬಾತನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದ್ದು, ವ್ಯಕ್ತಿಯೊಬ್ಬ ಬೋರ್ಡ್ ಮಾಡಿಕೊಟ್ಟಿದ್ದ. ಯಾರೋ ಹ್ಯಾಕ್ ಮಾಡಿರುವ ಸಾಧ್ಯತೆಯಿದೆ’ ಎಂದು ಆತ ಹೇಳಿದ್ದಾನೆ. ಆದರೆ ಬೋರ್ಡ್ ಬದಲಿಸಿದ ಆರೋಪದಡಿ ಅಸ್ಸಾಂ ಮೂಲದ ಅಬ್ದುಲ್ ಸಮದ್ ಎಂಬಾತನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

“ಇಂಥಹ ಅತಿರೇಕದ ಕೃತ್ಯಗಳನ್ನ ಸಾರ್ವಜನಿಕರು ಪ್ರಶ್ನಿಸಬೇಕಿದೆ. ಎಲ್ಲಾ ಸಂದರ್ಭಗಳಲ್ಲಿಯೂ ಕನ್ನಡಪರ ಹೋರಾಟಗಾರರೇ ಬರಲಿ ಎಂದು ಕಾಯಬಾರದು, ಇಂಥವರನ್ನ ಪ್ರಶ್ನಿಸಬೇಕು. ನಾವೇ ಯಾಕೆ‌? ನಮಗೆ ಯಾಕೆ ಎಂದು ಸುಮ್ಮನಾದರೆ ನಾಡು, ನುಡಿಯ ಕುರಿತು ಪ್ರಶ್ನಿಸುವವರು ಯಾರು?. ಇಷ್ಟು ದೊಡ್ಡ ಏರಿಯಾದಲ್ಲಿ ಯಾರೂ ಸಹ ಈ ಕೃತ್ಯವನ್ನು ಪ್ರಶ್ನಿಸದಿರುವುದು ಬೇಸರದ ಸಂಗತಿಯಾಗಿದೆ” ಎಂದು ಸ್ಥಳೀಯ ನಿವಾಸಿ ಶರತ್ ಹೇಳಿದರು.


Leave a Comment

Your email address will not be published. Required fields are marked *