ನನಗೆ ಮೈಸೂರು ಸ್ಯಾಂಡಲ್​ ಸೋಪ್​ ರಾಯಭಾರಿಯಾಗುವ ಆಸೆ ಇಲ್ಲ: ಯದುವೀರ್


ಮೈಸೂರು:‌ ಮೈಸೂರು ಸ್ಯಾಂಡಲ್ ಸೋಪಿಗೆ ನನಗೆ ವೈಯಕ್ತಿಕವಾಗಿ ರಾಯಭಾರಿಯಾಗುವ ಆಸೆ ಇಲ್ಲ ಎಂದು ರಾಜವಂಶಸ್ಥರು, ಬಿಜೆಪಿ ಸಂಸದರೂ ಆಗಿರುವ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸ್ಪಷ್ಟಪಡಿಸಿದರು.

“ಮೈಸೂರು ಸ್ಯಾಂಡಲ್ ಸೋಪಿಗೆ ಸೂಕ್ತ ರಾಯಭಾರಿ ಎಂದರೆ ನಮ್ಮ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಬ್ರ್ಯಾಂಡೂ ನಮ್ದೇ ಬ್ರ್ಯಾಂಡು ಅಂಬಾಸಿಡರು ನಮ್ಮವ್ರೇ ‘ ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಚಾರವಾಗಿ, ನಗರದ ಖಾಸಗಿ ಹೋಟೆಲ್​ನಲ್ಲಿಂದು ಮಾಧ್ಯಮಗಳಿಗೆ ಅವರು ಪ್ರತಿಕ್ರಿಯೆ ನೀಡಿದರು”ರಾಜಮನೆತನ ಕಮರ್ಷಿಯಲ್ ಆಗಿ ಸೇವೆ ಮಾಡುವುದಿಲ್ಲ. ನಾವು ಸದಾಕಾಲ ಕನ್ನಡದ ಬ್ರ್ಯಾಂಡ್​ಗಳ ಪರವಾಗಿಯೇ ಇರುತ್ತೇವೆ. ಹೀಗಾಗಿ ನನ್ನ ಹೆಸರು ಸಾಮಾಜಿಕ ಜಾಲಾತಾಣದಲ್ಲಿ ಬರುತ್ತಿದ್ದರೂ ಅದಕ್ಕೆ ನನ್ನ ಸಹಮತವಿಲ್ಲ” ಎಂದರು.

“ಮೈಸೂರು ಸ್ಯಾಂಡಲ್ ಕನ್ನಡಿಗರೇ ಕಟ್ಟಿ ಬೆಳೆಸಿದ ಸಂಸ್ಥೆ. ಅದಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆದ ಕನ್ನಡಿಗರನ್ನು ರಾಯಭಾರಿ ಮಾಡಬೇಕು. ಹಾಗಾಗಿ, ನಟಿ ತಮನ್ನಾ ಭಾಟಿಯಾ ನೇಮಕಕ್ಕೆ ನಮ್ಮ ವಿರೋಧವಿದೆ” ಎಂದು ಹೇಳಿದರು.

“ಸೋಪು ಎಂದಕೂಡಲೇ ಹಿರೋಯಿನ್ನೇ ಏಕೆ ಬೇಕು?. ಸೋಪ್‌ಗೆ ಲಿಂಗಬೇಧ ಇರುತ್ತಾ? ಕ್ರಿಕೆಟ್ ಆಟಗಾರರು, ಒಳ್ಳೆಯ ನಾಯಕ ನಟರು ರಾಯಭಾರಿ ಆಗಬಹುದಿತ್ತಲ್ಲಾ?. ಒಂದರ್ಥದಲ್ಲಿ ಇದು ಕನ್ನಡಿಗರಿಗೆ ಮಾಡಿದ ಅವಮಾನ” ಎಂದು ಕಿಡಿಕಾರಿದರು.

“ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಕನ್ನಡಿಗರು ಬಹಳಷ್ಟು ಜನರಿದ್ದಾರೆ. ಅವರ್ಯಾರೂ ರಾಜ್ಯ ಸರ್ಕಾರದ ಕಣ್ಣಿಗೆ ಕಾಣಲಿಲ್ಲವೇ? ಅವರದ್ದೇ ಪಕ್ಷದ ನಟಿ ರಮ್ಯಾ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಕನ್ನಡಿಗರನ್ನೇ ರಾಯಭಾರಿ ಮಾಡಿದ್ದರೆ ಬ್ರ್ಯಾಂಡಿನ ಮೌಲ್ಯ ಇನ್ನೂ ಹೆಚ್ಚಾಗುತ್ತಿತ್ತು” ಎಂದರು


Leave a Comment

Your email address will not be published. Required fields are marked *