ಬಳ್ಳಾರಿ ಜೈಲಿನಲ್ಲಿ ಶಿವಮೊಗ್ಗ ಹರ್ಷ ಕೊಲೆ ಪ್ರಕರಣದ ಆರೋಪಿಗಳ ತಕರಾರು


ಬಳ್ಳಾರಿ: “ಶಿವಮೊಗ್ಗದ ಹಿಂದೂ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದ ಆರೋಪಿಗಳಿಬ್ಬರೂ ಎರಡು ದಿನಗಳ ಹಿಂದೆ ಜೈಲಿನಲ್ಲಿ ತಕರಾರು ತೆಗೆದು ಗಲಾಟೆ ಮಾಡಿದ್ದಾರೆ. ಸದ್ಯ ಇಬ್ಬರಿಗೂ ಎಚ್ಚರಿಕೆ ನೀಡಿ ಪ್ರತ್ಯೇಕವಾಗಿ ಇರಿಸಲಾಗಿದೆ” ಎಂದು ಬಳ್ಳಾರಿ ಕೇಂದ್ರ ಕಾರಾಗೃಹದ ಅಧೀಕ್ಷಕಿ ಲತಾ ತಿಳಿಸಿದ್ದಾರೆ.

ಹರ್ಷ ಕೊಲೆ ಪ್ರಕರಣದ ಹತ್ತು ಜನ ಆರೋಪಿಗಳ ಪೈಕಿ ಜಿಲಾನ್ ಹಾಗೂ ಸೈಯದ್ ನಿಹಾಲ್ ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿದ್ದಾರೆ. ಈ ಇಬ್ಬರೂ ಜೈಲಿನ ಸಿಬ್ಬಂದಿ, ಅಧಿಕಾರಿಗಳ ಜೊತೆ ನಿತ್ಯ ಜಗಳ ಮಾಡಿ ಅವಾಜ್ ಹಾಕಿ, ಕಿರಿಕ್ ಮಾಡುತ್ತಿದ್ದಾರೆ. ಕಿರಿಕ್‌ ಮಾಡುತ್ತಿರುವ ವಿಡಿಯೋ ಈಗ ಲಭ್ಯವಾಗಿದೆ.

ನಿತ್ಯ ಒಂದೊಂದು ಸೌಲಭ್ಯ ಕೇಳಿ ಜೈಲು ಸಿಬ್ಬಂದಿಗೆ ಧಮ್ಕಿ ಹಾಕುತ್ತಿದ್ದಾರೆ. ಜೈಲಿನಲ್ಲಿ ನಡೆದ ಹಳೆ ಘಟನೆಗಳ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಹೇಳುತ್ತಿದ್ದಾರೆ. ನಮ್ಮನ್ನು ಸಾಮಾನ್ಯ ಕೈದಿಗಳಂತೆ ಟ್ರೀಟ್ ಮಾಡಿ ಪ್ರತ್ಯೇಕ ಕೊಠಡಿ ಕೊಡಿ, ವಿಶೇಷ ಸೌಲಭ್ಯ ನೀಡಿ ಎಂದು ಇಬ್ಬರು ಗಲಾಟೆ ಮಾಡುತ್ತಿದ್ದಾರೆ.

ಜೈಲಿನಲ್ಲಿ ಬೇರೇ ಬೇರೆ ಕೋಣೆಗೆ ಅಥವಾ ಜೈಲರ್ ಕೊಠಡಿಗೆ ಹೋಗುವಾಗ ಕಡ್ಡಾಯವಾಗಿ ಚೆಕಪ್ ಮಾಡಲಾಗುತ್ತದೆ. ಆದರೆ ನಮ್ಮನ್ನು ನೀವು ಪರಿಶೀಲನೆ ಮಾಡಬೇಡಿ ಎಂದು ಹೇಳುತ್ತಿದ್ದಾರೆ. ಅಷ್ಟೇ ಅಲ್ಲದೇ ಸಣ್ಣ ಪುಟ್ಟ ವಿಚಾರಕ್ಕೂ ಜೈಲು ಸಿಬ್ಬಂದಿಯನ್ನು ಆರೋಪಿಗಳು ನಿಂದಿಸುತ್ತಿದ್ದಾರೆ ಎಂದು ಜೈಲಿನ ಸಿಬ್ಬಂದಿ ಹೇಳಿದ್ದಾರೆ.


Leave a Comment

Your email address will not be published. Required fields are marked *