ಕಾಳಸಂತೆಯಲ್ಲಿ IPL ಟಿಕೆಟ್ ಮಾರಾಟಕ್ಕೆ ಕುಮ್ಮಕ್ಕು


ಬೆಂಗಳೂರು: ಆರ್​ಸಿಬಿ ಹಾಗೂ ಕೋಲ್ಕತ್ತಾ ನಡುವಿನ ಐಪಿಎಲ್ ಪಂದ್ಯಕ್ಕೆ ಅಕ್ರಮವಾಗಿ ಟಿಕೆಟ್ ಮಾರಾಟ ಮಾಡಲು ನೆರವು ನೀಡಿದ್ದ ಇಬ್ಬರು ಟ್ರಾಫಿಕ್ ಕಾನ್​ಸ್ಟೇಬಲ್​ಗಳನ್ನು ಅಮಾನತು ಮಾಡಿ ಇಲಾಖಾ ತನಿಖೆಗೆ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂ.ಎನ್.ಅನುಚೇತ್ ಆದೇಶಿಸಿದ್ದಾರೆ.

ಹಲಸೂರು ಸಂಚಾರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ರವಿಚಂದ್ರ ಹಾಗೂ ಸಂಚಾರ ನಿರ್ವಹಣಾ ಕೇಂದ್ರದಲ್ಲಿ(ಟಿಎಂಸಿ) ಕೆಲಸ ಮಾಡುತ್ತಿರುವ ವೆಂಕಟಗಿರಿ ಗೌಡ ಎಂಬವರನ್ನು ಅಮಾನತು ಮಾಡಲಾಗಿದೆ. ಅಲ್ಲದೆ, ಇಲಾಖಾ ತನಿಖೆಗೆ ಆದೇಶಿಸಲಾಗಿದೆ.

ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೇ 17ರಂದು ಆರ್​ಸಿಬಿ ಹಾಗೂ ಕೊಲ್ಕತ್ತಾ ನಡುವೆ ಪಂದ್ಯವಿತ್ತು. ವಿಜಯನಗರ ಪಾರ್ಕ್​ವೊಂದರಲ್ಲಿ ಕಾಳಸಂತೆಯಲ್ಲಿ ಐಪಿಎಲ್ ಟಿಕೆಟ್ ಮಾರಾಟ ಮಾಡುತ್ತಿದ್ದ ಶಂಕರ್ ಹಾಗೂ ಸುರೇಶ್ ಗೋವಿಂದರಾಜನಗರ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು. ಆರೋಪಿಗಳಿಂದ 52 ಟಿಕೆಟ್​ಗಳನ್ನು ವಶಕ್ಕೆ ಪಡೆದುಕೊಂಡಿದ್ದರು. ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಇಬ್ಬರು ಕಾನ್​ಸ್ಟೇಬಲ್​ಗಳು ಮಾರಾಟ ಮಾಡಲು ಟಿಕೆಟ್ ನೀಡುತ್ತಿದ್ದರು ಎಂಬುದನ್ನು ಬಾಯ್ಬಿಟ್ಟಿದ್ದರು.


Leave a Comment

Your email address will not be published. Required fields are marked *