ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಗೆ ದೂರು ಸಲ್ಲಿಸಿದ ಹಿಂದೂ ಸಂಘಟನೆಗಳ ನಿಯೋಗ


ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಇತ್ತೀಚಿಗೆ ನಡೆದ ಅಬ್ದುಲ್ ರಹಿಮಾನ್ ಹತ್ಯೆ ಸೇಡಿನಿಂದ ಆದದ್ದಲ್ಲ, ಮರಳು ಮಾಫಿಯಾದಿಂದ ಆಗಿರುವಂಥದ್ದು. ಸರ್ಕಾರ ಇದಕ್ಕೆ ಬಣ್ಣ ಕಟ್ಟುವ ಮೂಲಕ ಹಿಂದೂ ನಾಯಕರನ್ನು ಹತ್ತಿಕ್ಕಲು ಯತ್ನಿಸುತ್ತಿದೆ ಎಂದು ಹಿಂದೂ ಮುಖಂಡ ಹಾಗೂ ಶ್ರೀರಾಮಸೇನೆ ಸಂಘಟನೆಯ ರಾಷ್ಟ್ರಾಧ್ಯಕ್ಷ ಪ್ರಮೋದ್ ಮುತಾಲಿಕ್ ತಿಳಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೂ ವಿರೋಧಿ ಚಟುವಟಿಕೆಗಳು ನಡೆಯುತ್ತಿವೆ ಎಂದು ಆರೋಪಿಸಿ ಹಿಂದೂ ಸಂಘಟನೆಗಳ ನಿಯೋಗ ಇಂದು ನೃಪತುಂಗ ರಸ್ತೆಯಲ್ಲಿರುವ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಗೆ ದೂರು ಸಲ್ಲಿಸಿತು.

ಬಳಿಕ ಮಾತನಾಡಿದ ಪ್ರಮೋದ್ ಮುತಾಲಿಕ್‌, “ಕೇರಳದ ಸುನ್ನಿ ಸ್ಟೂಡೆಂಟ್ಸ್ ಫೆಡರೇಷನ್‌ನ ಸದಸ್ಯರು ಸಾವಿರಾರು ಸಂಖ್ಯೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಬಂದು ಪ್ರತಿಭಟನೆ ಮಾಡಿ, ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದಾರೆ‌. ಅವರಿಗೆ ಇಲ್ಲಿ ಏನು‌ ಕೆಲಸ? ಇಲ್ಲಿ ಯಾಕೆ ಅವರನ್ನು ಒಳಗೆ ಸೇರಿಸಿಕೊಳ್ಳಲಾಗಿದೆ?” ಎಂದು ಪ್ರಶ್ನಿಸಿದರು.

ವಕ್ಫ್ ಬಿಲ್ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿಯೂ ಕೇರಳದ ಸಂಘಟನೆಗಳು ದಕ್ಷಿಣ ಕನ್ನಡ ಜಿಲ್ಲೆಗೆ ಬಂದಿದ್ದವು. ದಕ್ಷಿಣ ಕನ್ನಡದಲ್ಲಿ ನಡೆಯುತ್ತಿರುವ ಹತ್ಯೆ, ಲವ್ ಜಿಹಾದ್ ಪ್ರಕರಣಗಳು ಕೇರಳದ ಮೂಲಕ ನಡೆಯುತ್ತಿವೆ” ಎಂದು ಅವರು ಆರೋಪಿಸಿದರು.

“ಅಬ್ದುಲ್ ರಹಿಮಾನ್ ಹತ್ಯೆಗೆ ಸೇಡಿನ ಬಣ್ಣ ಕಟ್ಟಿ ರಾಜ್ಯ ಸರ್ಕಾರ ಹಿಂದೂ ಮುಖಂಡರನ್ನು ಹತ್ತಿಕ್ಕಲು ಯೋಜಿಸುತ್ತಿದೆ. ಆದರೆ ಅಬ್ದುಲ್ ರೆಹಮಾನ್ ಹತ್ಯೆಗೆ ಮರಳು ಮಾಫಿಯಾ ಕಾರಣ. ಈ ವಿಚಾರವನ್ನು ಸರ್ಕಾರ ವ್ಯವಸ್ಥಿತವಾಗಿ ಮುಚ್ಚಿಡುತ್ತಿದೆ. ಎಲ್ಲರನ್ನೂ ಒಂದೇ ದೃಷ್ಟಿಯಿಂದ ನೋಡಿದಾಗ ಮಾತ್ರವೇ ಸೌಹಾರ್ದತೆ ಮೂಡಲು ಸಾಧ್ಯ, ಕಾಂಗ್ರೆಸ್‌ನ ಪುಷ್ಟೀಕರಣದ ನಿಲುವು ಮತ್ತಷ್ಟು ಬೆಂಕಿ ಹೆಚ್ಚುತ್ತದೆ” ಎಂದು ಕಿಡಿಕಾರಿದರು.


Leave a Comment

Your email address will not be published. Required fields are marked *