ದಯಾನಂದ್​ ಅಮಾನತು ಆದೇಶ ರದ್ದು ಪಡಿಸುವಂತೆ ಹೆಡ್ ಕಾನ್ಸ್​ಟೇಬಲ್​ ಏಕಾಂಗಿ ಪ್ರತಿಭಟನೆ


ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ದುರಂತ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತರಾಗಿದ್ದ ದಯಾನಂದ ಸೇರಿದಂತೆ ಐವರು ಅಧಿಕಾರಿಗಳನ್ನು ಅಮಾನತುಗೊಳಿಸಿದೆ. ಏಕಾಏಕಿ ಮಾಡಿರುವ ದಯಾನಂದ್ ಅವರ ಸಸ್ಪೆಂಡ್ ರದ್ದುಪಡಿಸಬೇಕೆಂದು ರಾಜಭವನ ಮುಂದೆ ಹೆಡ್​ ಕಾನ್ಸ್​ಟೇಬಲ್​ ಏಕಾಂಗಿ ಪ್ರತಿಭಟನೆ ನಡೆಸಿದರು.

ತೋಳಿಗೆ ಕಪ್ಪುಪಟ್ಟಿ ಧರಿಸಿ ಅಂಬೇಡ್ಕರ್ ಫೋಟೊ ಇಟ್ಟುಕೊಂಡು ರಾಜಭವನ ಮುಂದೆ ಪ್ರತಿಭಟನೆ ನಡೆಸಿದರು. ದಯಾನಂದ್ ಅವರನ್ನು ಅಮಾನತುಗೊಳಿಸಿರುವ ಆದೇಶವನ್ನು ಕೂಡಲೇ ಹಿಂಪಡೆಯಬೇಕು ಹಾಗೂ ಪೊಲೀಸರಿಗೆ ರಕ್ಷಣೆ ನೀಡಬೇಕೆಂದು ನರಸಿಂಹರಾಜ್ ಅವರು ದೂರಿನಲ್ಲಿ ತಿಳಿಸಿದ್ಧಾರೆ.ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಹೆಡ್ ಕಾನ್ಸ್​ಟೇಬಲ್​, “ಆರ್​ಸಿಬಿ ವಿಜಯೋತ್ಸವ ವೇಳೆ ಕಾಲ್ತುಳಿತವಾಗಿ 11 ಮಂದಿ ಸಾವನ್ನಪ್ಪಿರುವ ಸಂಬಂಧ ಆಯುಕ್ತರಾಗಿದ್ದ ದಯಾನಂದ ಅವರನ್ನು ಸರ್ಕಾರವು ಅಮಾನತು ಮಾಡಿರುವ ಆದೇಶವನ್ನು ಹಿಂಪಡೆದು ಪೊಲೀಸರಿಗೆ ರಕ್ಷಣೆ ನೀಡಬೇಕೆಂದು ಆಗ್ರಹಿಸಿದರು.ಪೊಲೀಸರು ಒಂದು ರೀತಿ ಬ್ರೋಕರ್​ಗಳಾಗಿದ್ದಾರೆ. ಈ ಕಡೆ ಕಾಂಗ್ರೆಸ್​ನವರು ಒದ್ದರೂ ಒದಿಸಿಕೊಳ್ಳಬೇಕು. ಬಿಜೆಪಿ ಒದ್ದರೂ ಒದಿಸಿಕೊಳ್ಳಬೇಕು. ಜೆಡಿಎಸ್​ನವರು ಗುದ್ದಿದ್ರು ಗುದ್ದಿಸಿಕೊಳ್ಳಬೇಕು. ಸಂಜೆ ಆದ್ರೆ ನಮ್ಮವರು ರಾಜಕಾರಣಿಗಳ ಮನೆ ಮುಂದೆ ಹೋಗಿ ಕೈಕಟ್ಟಿ ನಿಲ್ಲುತ್ತಿದ್ದಾರೆ. ದಯಾನಂದ್ ಸಾಹೇಬರು ಒಳ್ಳೆ ಕೆಲಸ ಮಾಡಿದ್ದಾರೆ. ಅವರನ್ನು ಅಮಾನತು ಮಾಡಿದ್ದು ಸರಿಯಿಲ್ಲ. ಹೀಗಾಗಿ ಅಮಾನತು ರದ್ದು ಮಾಡಬೇಕು” ಎಂದು ಒತ್ತಾಯಿಸಿದರು. ಈ ವೇಳೆ ವಿಧಾನಸೌಧ ಪೊಲೀಸರು ಕಾನ್ಸ್​ಟೇಬಲ್​ ಅವರನ್ನು ವಶಕ್ಕೆ ಪಡೆದರು.


Leave a Comment

Your email address will not be published. Required fields are marked *